ಹುಮನಾಬಾದ: ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹೂಗಾರ ಸಮಾಜ ಬೆಳೆಯಬೇಕು. ಸಮಾಜ ಸಂಘಟಿತವಾಗಬೇಕು ಎಂದು ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹೂಗಾರ ತಿಳಿಸಿದರು.
ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಭವಾನಿ ಮಂದಿರದಲ್ಲಿ ಶನಿವಾರ ಮಧ್ಯಾಹ್ನ ಕರೆದ ಹೂಗಾರ ಸಮಾಜದ ಸಭೆಯಲ್ಲಿ ಮಾತನಾಡಿದವರು, ಹೂಗಾರ ಸಮಾಜದ ಎಲ್ಲಾ ಬಾಂಧವರು ಒಂದಾಗಬೇಕು. ಅಖಿಲ ಕರ್ನಾಟಕ ಹೂಗಾರ ಸಂಘದ ಕಾರ್ಯಚಟುವಟಿಕೆಗಳಲ್ಲಿ ಭಾಗಿ ಆಗಬೇಕು ಎಂದು ತಿಳಿಸಿದರು.
ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ರಾಜಕುಮಾರ ಹೂಗಾರ ಮದಕಟ್ಟಿ ಮಾತನಾಡಿ, ಹೂಗಾರ್ ಸಮಾಜಕ್ಕೆ ತನ್ನದೇ ಆದ ಇತಿಹಾಸ ಪರಂಪರೆ ಹೊಂದಿದೆ. ಕಳೆದ ಕೆಲ ವರ್ಷಗಳಿಂದ ಕುಂಟಿತಗೊಂಡಿದ್ದ ಸಮಾಜ ಸಂಘಟನೆಯ ಕೆಲಸ ಇದೀಗ ನಾವು ಚುರುಕುಗೊಳಿಸುತ್ತಿದ್ದೇವೆ. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹುಮನಾಬಾದ ತಾಲೂಕು ಅಧ್ಯಕ್ಷರಾಗಿ ಪ್ರವೀಣ ಹೂಗಾರ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶಕುಮಾರ ಹೂಗಾರ ಸಿಂದಬಂದಗಿ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.
ರಾಜ್ಯ ಸಹ ಕಾರ್ಯದರ್ಶಿ ದುರ್ಯೋಧನ ಹೂಗಾರ, ರಾಜ್ಯ ಕೋರ್ ಕಮಿಟಿ ಸದಸ್ಯರಾದ ರೇವಣ್ಣಪ್ಪ ಹೂಗಾರ, ಕಾಶಿನಾಥ ಹೂಗಾರ ಬುದ್ದೇರಾ ಮಾತನಾಡಿ, ಹೂಗಾರ ಸಮಾಜದರು ಪ್ರತಿಯೊಂದು ಊರುಗಳಲ್ಲಿ ಇದ್ದಾರೆ. ನೂತನ ಆಯ್ಕೆಕೊಂಡ ಪದಾಧಿಕಾರಿಗಳು ಎಲ್ಲಾ ಸಮುದಾಯದ ಜನರನ್ನು ಸಂಪರ್ಕ ಮಾಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜ ಸಂಘಟನೆಯ ಕೆಲಸ ಮಾಡಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ಆಗದಂತೆ ನೋಡಿಕೊಳ್ಳಬೇಕು. ಹೂಗಾರ ಸಮಾಜದಲ್ಲಿನ ಕುಂದು ಕೊರತೆಗಳ ಕುರಿತು ಅರಿತುಕೊಂಡು ಜಿಲ್ಲಾ ಹಾಗೂ ರಾಜ್ಯಮಟ್ಟದ ಸಮಿತಿ ಗಳಿಗೆ ಮಾಹಿತಿ ನೀಡುವ ಕೆಲಸ ಆಗಬೇಕು ಎಂದು ತಿಳಿಸಿದರು.

