ಹೈದ್ರಾಬಾದ್: ತೆಲಂಗಾಣ ರಾಜ್ಯದ ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕಾಗಿ ತೆಲಂಗಾಣ ಸರ್ಕಾರವು ಹೊಸ ಯೋಜನೆಯೊಂದು ಘೋಷಣೆ ಮಾಡಿದೆ. ಇನ್ನು ಮುಂದೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ದಿನದಂದು ವಿಶೇಷ ರಜೆಯನ್ನು ಪಡೆಯಬಹುದಾಗಿದೆ.
ತೆಲಂಗಾಣ ಪೊಲೀಸ್ ಮಹಾನಿರ್ದೇಶಕ ಬಿ. ಶಿವಧರ್ ರೆಡ್ಡಿ ಅವರು ಈ ಕುರಿತು ಅಧಿಕೃತ ಸುತ್ತೋಲೆಯನ್ನು ಹೊರಡಿಸಿದ್ದು, ಪೊಲೀಸ್ ಇಲಾಖೆಯ ಕೆಲಸದ ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ಸಿಬ್ಬಂದಿಯ ನೈತಿಕ ಸ್ಥೆರ್ಯವನ್ನು ಹೆಚ್ಚಿಸಲು ಮತ್ತು ಕೆಲಸ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಪಾಡುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಅತಿ ತುರ್ತು ಅಥವಾ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ, ಸಿಬ್ಬಂದಿಗಳು ಅರ್ಜಿ ಸಲ್ಲಿಸಿದಾಗ ರಜೆ ಮಂಜೂರು ಮಾಡುವಂತೆ ಎಲ್ಲಾ ಘಟಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಈ ರಜೆಯು ಸ್ವಯಂಚಾಲಿತವಾಗಿ ಸಿಗುವುದಿಲ್ಲ. ಸಿಬ್ಬಂದಿಗಳು ರಜೆಗಾಗಿ ಮುಂಚಿತವಾಗಿ ಲಿಖಿತ ವಿನಂತಿ ಮಾಡಿಕೊಳ್ಳಬೇಕು ಮತ್ತು ಪೂರಕ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇಲಾಖೆಯ ಈ ಮಾನವೀಯ ನಡೆಯನ್ನು ವ್ಯಾಪಕವಾಗಿ ಶ್ಲಾಘಿಸಲಾಗುತ್ತಿದೆ.
